ಮೈಸೂರು- ಕಾಡಾನೆ ದಾಳಿಯಿಂದ ಮೈಸೂರು ದಸರಾ ಆನೆ ಗೋಪಾಲಸ್ವಾಮಿ ಸಾವನ್ನಪ್ಪಿದೆ. ಮೈಸೂರಿನ ನಾಗರಹೊಳೆ ಅಭಯಾರಣ್ಯದ ಮತ್ತಿಕೋಡು ಆನೆ ಶಿಬಿರದಲ್ಲಿ ಗೋಪಾಲಸ್ವಾಮಿ ಮೃತಪಟ್ಟದ್ದಾನೆ.
ಎಂದಿನಂತೆ ಗೋಪಾಲಸ್ವಾಮಿ ಸೇರಿದಂತೆ ಇತರೆ ಆನೆಗಳನ್ನು ಕಾಡಿನಲ್ಲಿ ಮೇವಿಗೆ ಬಿಡಲಾಗಿತ್ತು. ಈ ವೇಳೆ ಮಸ್ತಿಯಲ್ಲಿದ್ದ ಕಾಡಾನೆ ದಾಳಿ ಮಾಡಿದೆ. ಗೋಪಾಲಸ್ವಾಮಿಗೂ ಕಾಡಾನೆಗೂ ಕಾಳಗ ನಡೆದಿದೆ. ಈ ಹೊಡೆದಾಟದಲ್ಲಿ ಗೋಪಾಲಸ್ವಾಮಿ ಸೋತು ಸಾವಿಗೆ ಶರಣಾಗಿದ್ದಾನೆ.
ಕಾಡಿನಲ್ಲಿ ಆನೆಗಳು ಘೀಳಿಡುವ ಶಬ್ದ ಅತಿಯಾದಾಗ ಅನುಮಾನಗೊಂಡ ಮಾವುತರು ಹಾಗೂ ಕಾವಾಡಿಗಳು ಸ್ಥಳಕ್ಕೆ ಹೋದಾಗ ಗೋಪಾಲಸ್ವಾಮಿ ಉಸಿರು ಚೆಲ್ಲಿತ್ತು.
ಶ್ರೀರಂಗಪಟ್ಟಣದ ದಸರಾ ಮಹೋತ್ಸವದ ಉದ್ಘಾಟನೆ ವೇಳೆ ಜನದಟ್ಟಣೆ ಹಾಗು ಪಟಾಕಿ ಶಬ್ದದಿಂದ ವಿಚಲಿತನಾಗಿದ್ದ ಗೋಪಾಲಸ್ವಾಮಿ ಆನೆ ಈ ಬಾರಿಯ ದಸರಾದಲ್ಲಿ ಮರದ ಅಂಬಾರಿ ಹೊತ್ತು ಗಮನ ಸೆಳಿದಿತ್ತು. ಈ ತನಕ ಗೋಪಾಲಸ್ವಾಮಿ ಐದು ದಸರಾದಲ್ಲಿ ಭಾಗವಹಿಸಿದ್ದಾನೆ.
39 ವರ್ಷದ ಗೋಪಾಲಸ್ವಾಮಿ ಶಾಂತಸ್ವಾಭಾವದ ಆನೆಯಾಗಿದೆ. ಗೋಪಾಲಸ್ವಾಮಿ ಸಾವು ಪ್ರಾಣಿ ಪ್ರಿಯರಲ್ಲಿ ದುಃಖ ಭರಿಸಿದೆ
Comments