*ಹತ್ತತ್ತು ವರ್ಷ ಪ್ರಧಾನಿ ಆಗಿ ರೈತರಿಗೆ, ಕಾರ್ಮಿಕರಿಗೆ, ಯವ ಸಮೂಹಕ್ಕೆ, ಮಹಿಳೆಯರಿಗೆ, ದುಡಿಯುವ ವರ್ಗಗಳಿಗೆ ಒಂದೇ ಒಂದು ಕಾರ್ಯಕ್ರಮವನ್ನೂ ಕೊಡಲಾಗಲಿಲ್ಲವಲ್ಲ ಏಕೆ: ಸಿ.ಎಂ.ಸಿದ್ದರಾಮಯ್ಯ ಪ್ರಶ್ನೆ*
*ಬೆಲೆ ಏರಿಕೆ, ರೂಪಾಯಿ ಮೌಲ್ಯ ಕುಸಿತ, ರೈತರ ಆದಾಯ ಕುಸಿತ, ನಿರುದ್ಯೋಗ ಹೆಚ್ಚಳ, ದೇಶದ ಆರ್ಥಿಕತೆ ಕುಸಿತ ಮೋದಿಯವರ ಸಾಧನೆ: ಈ ಚಂದಕ್ಕೆ ಪ್ರಧಾನಿ ಆಗ್ಬೇಕಾ: ಸಿ.ಎಂ.ಪ್ರಶ್ನೆ*
ದೊಡ್ಡಬಳ್ಳಾಪುರ-ಬೆಲೆ ಏರಿಕೆ, ರೂಪಾಯಿ ಮೌಲ್ಯ ಕುಸಿತ, ರೈತರ ಆದಾಯ ಕುಸಿತ, ನಿರುದ್ಯೋಗ ಹೆಚ್ಚಳ, ದೇಶದ ಆರ್ಥಿಕತೆ ಕುಸಿತ ಮೋದಿಯವರ ಸಾಧನೆ. ಈ ಚಂದಕ್ಕೆ ಇವರು ಪ್ರಧಾನಿ ಆಗ್ಬೇಕಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಕ್ಷಾ ರಾಮಯ್ಯ ಪರವಾಗಿ ದೊಡ್ಡಬಳ್ಳಾಪುರದಲ್ಲಿ ರೋಡ್ ಶೋ ನಡೆಸಿ ಮಾತನಾಡಿದರು.
ಹತ್ತತ್ತು ವರ್ಷ ಪ್ರಧಾನಿ ಆಗಿ ರೈತರಿಗೆ, ಕಾರ್ಮಿಕರಿಗೆ, ಯುವ ಸಮೂಹಕ್ಕೆ, ಮಹಿಳೆಯರಿಗೆ, ದುಡಿಯುವ ವರ್ಗಗಳಿಗೆ, ಕೃಷಿ ಕಾರ್ಮಿಕರಿಗೆ, ಮಧ್ಯಮ ವರ್ಗದವರಿಗೆ, ಸಣ್ಣ ಮತ್ತು ಮಧ್ಯಮ ವರ್ಗದ ಉದ್ಯಮಿಗಳಿಗೆ ಒಂದೇ ಒಂದು ಕಾರ್ಯಕ್ರಮವನ್ನೂ ಕೊಡಲಾಗಲಿಲ್ಲವಲ್ಲ ಏಕೆ. ಮತೆ ನೀವು ಪ್ರಧಾನಿ ಆಗಿ ಭಾರತೀಯರಿಗೆ , ದೇಶಕ್ಕೆ ಸಿಕ್ಕಿದ್ದಾದರೂ ಏನು ಎಂದು ಪ್ರಶ್ನಿಸಿದರು.
ವಿದೇಶದಿಂದ ಕಪ್ಪು ಹಣ ತರುವುದಾಗಿ ಹೇಳಿದ್ರಿ ತರಲಿಲ್ಲ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ರಿ, ಹೊಸ ಉದ್ಯೋಗ ಸೃಷ್ಟಿಯಾಗುವುದಿರಲಿ ಇರುವ ಉದ್ಯೋಗಗಳೇ ನಷ್ಟ ಆದವು. ರೈತರ ಆದಾಯ ದುಪ್ಪಟ್ಟು ಮಾಡುವುದಾಗಿ ಹೇಳಿದಿರಿ, ಆದರೆ ರೈತರ ಖರ್ಚು ಮೂರು ಪಟ್ಟು ಆಗಿದೆ, ಡಾಲರ್ ಎದುರು ರೂಪಾಯಿ ಮೌಲ್ಯ ಹೆಚ್ಚುವುದಾಗಿ ಹೇಳಿದ್ರಿ, ಆದರೆ ರೂಪಾಯಿ ಮೌಲ್ಯ ಹೆಚ್ಚಾಗಲೇ ಇಲ್ಲ ಎಂದು ಮೋದಿ ವೈಫಲ್ಯಗಳ ಸುದೀರ್ಘ ಪಟ್ಟಿಯನ್ನೇ ಪ್ರಸ್ತಾಪಿಸಿದರು.
ಬಿಜೆಪಿಯಾಗಲೀ, ಮೋದಿಯವರಾಗಲೀ ಕೊಟ್ಟ ಮಾತಲ್ಲಿ ಒಂದನ್ನೂ ಈಡೇರಿಸಲಿಲ್ಲ. ಬದಲಿಗೆ ಹೇಳಿದ್ದಕ್ಕೆ ಉಲ್ಟಾ ಅನಾಹುತಗಳನ್ನೇ ಮಾಡಿದ್ದಾರೆ ಎಂದರು.
*ಕೋವಿಡ್ ಭ್ರಷ್ಟಾಚಾರಿಗೆ ತಕ್ಕ ಶಾಸ್ತಿ*
ಕೊರೋನಾ ಸಂದರ್ಭದಲ್ಲೂ ಕೋಟಿ ಕೋಟಿ ಕೊಳ್ಳೆ ಹೊಡೆದವರನ್ನು ಕ್ಷಮಿಸಲು ಸಾಧ್ಯವೇ? ಕೋವಿಡ್ ಹಗರಣದ ತನಿಖೆ ನಡೆಯುತ್ತಿದೆ. ಹಗರಣ ನಡೆದಿರುವುದಕ್ಕೆ ಸಾಕಷ್ಟು ಸಾಕ್ಷ್ಯಗಳಿರುವ ಬಗ್ಗೆ ನನಗೆ ಮಾಹಿತಿ ಇದೆ. ತನಿಖೆ ಪೂರ್ಣಗೊಂಡ ಬಳಿಕ ಭ್ರಷ್ಟಾಚಾರಿಕೆ ತಕ್ಕ ಶಾಸ್ತಿ ಆಗುತ್ತದೆ. ಆದ್ದರಿಂದ ಬಿಜೆಪಿ ಅಭ್ಯರ್ಥಿ ಸುಧಾಕರ್ ಅವರನ್ನು ಸೋಲಿಸಿ ಕನ್ನಡ ನಾಡಿನ ಪರವಾಗಿ ಧ್ವನಿ ಎತ್ತುವ ರಕ್ಷಾ ರಾಮಯ್ಯರನ್ನು ಗೆಲ್ಲಿಸಿಕೊಂಡು ಬನ್ನಿ. ರಕ್ಷಾ ರಾಮಯ್ಯ ನೂರಕ್ಕೆ ನೂರು ಗೆಲ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು.
Comments