ಕೇದಾರನಾಥ್ (ಉತ್ತರಾಖಂಡ)- ಹಿಂದೂ ಧರ್ಮಿಯರ ಪವಿತ್ರ ಕ್ಷೇತ್ರ ಉತ್ತರಖಂಡದ ಕೇದಾರನಾಥ ಸನ್ನಿಧಿಯಲ್ಲಿ ನಿರ್ಮಿಸಿರುವ ಆದಿ ಗುರು ಶ್ರೀ ಶಂಕರಾಚಾರ್ಯರ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಅನಾವರಣಗೊಳಿಸಿದರು. ಈ ಪ್ರತಿಮೆಯನ್ನು ಕೆತ್ತಿದ ಶಿಲ್ಪಿ ಮೈಸೂರಿನವರು ಎಂಬುವುದು ಹೆಮ್ಮೆಯ ಸಂಗತಿಯಾಗಿದ್ದು, ಇದು ಸಾಂಸ್ಕ್ರತಿಕ ನಗರಿಯ ಹಿರಿಮೆಯನ್ನು ಹೆಚ್ಚಿಸಿದೆ.
12 ಅಡಿ ಎತ್ತರವಿರುವ ಸುಮಾರು 28 ಟನ್ ತೂಕದ ಏಕ ಶಿಲಾ ಆದಿ ಗುರು ಶ್ರೀ ಶಂಕರಾಚಾರ್ಯರ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅನಾವರಣಗೊಳಿಸಿದರು. ಇದಕ್ಕೂ ಮೊದಲು ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಕೂಡ ಸಲ್ಲಿಸಿದರು. ತರುವಾಯ ಶಿವನ ಮೂರ್ತಿಗೆ ಆರತಿ ಬೆಳಗಿದರು. ಪ್ರತಿಮೆ ಅನಾವರಣದ ನಂತರ ಕೇದಾರನಾಥದಲ್ಲಿರುವ ಎಲ್ಲಾ ಗುಡಿಗಳಿಗೆ ನರೇಂದ್ರ ಮೋದಿ ಭೇಟಿ ನೀಡಿ ದರ್ಶನ ಪಡೆದರು.
12 ಅಡಿ ಎತ್ತರದ ಆದಿ ಗುರು ಶ್ರೀ ಶಂಕರಾಚಾರ್ಯರ ಪ್ರತಿಮೆಯನ್ನು ಮೈಸೂರಿನ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಅವರು ನಿರ್ಮಾಣ ಮಾಡಿದ್ದರು. ಪ್ರತಿಮೆ ಕೆತ್ತನೆ ಮಾಡಲು ಕೇಂದ್ರ ಸರ್ಕಾರ ಇವರಿಗೆ ಜವಾಬ್ದಾರಿ ವಹಿಸಿತ್ತು. ಅದರಂತೆ ಸುಂದರವಾದ ಪ್ರತಿಮೆ ಕೆತ್ತನೆ ಮಾಡಿದ್ದಾರೆ.
ಕಳೆದ ಸೆಪ್ಟಂಬರ್ ನಲ್ಲಿ ಪ್ರತಿಮೆ ಕೆತ್ತನೆ ಕಾರ್ಯವನ್ನು ಶಿಲ್ಪಿ ಅರುಣ್ ಯೋಗಿರಾಜ್ ಆರಂಭಿಸಿದ್ದರು. ಮೈಸೂರಿನ ಚಮೋಲಿ ತನಕ ರಸ್ತೆ ಮೂಲಕ ಪ್ರತಿಮೆಯನ್ನು ಸಾಗಿಸಲಾಗಿತ್ತು. ತರುವಾಯ ಚಮೋಲಿಯಿಂದ ಚಿನೂಕ್ ಹೆಲಿಕಾಪ್ಟರ್ ನಲ್ಲಿ ಕೇದಾರನಾಥ ಕ್ಷೇತ್ರಕ್ಕೆ ಕೊಂಡೋಯ್ಯಲಾಗಿತ್ತು. ಅಲ್ಲಿ ಕೂಡ ಸುಮಾರು ಒಂದು ತಿಂಗಳು ವಾಸ್ತವ್ಯ ಹೂಡಿದ್ದ ಶಿಲ್ಪಿ ಅರುಣ್ ಯೋಗಿರಾಜ್ ಪ್ರತಿಮೆಗೆ ಅಂತಿಮ ಸ್ಪರ್ಶ ನೀಡಿದ್ದರು.
ಕೇದಾರನಾಥಕ್ಕೆ ಭೇಟಿ ನೀಡಿದ್ದ ನರೇಂದ್ರ ಮೋದಿ ಅವರು, ಹಿಮಾಲಯದಲ್ಲಿರುವ ಎಲ್ಲಾ ದೇವಾಲಯಗಳ ಮರು ನಿರ್ಮಾಣಕ್ಕೆ 300 ಕೋಟಿ ರೂಪಾಯಿ ನೀಡಿದ್ದು, ಅದರ ಶಂಕುಸ್ಥಾಪನೆ ಕೂಡ ನೆರವೇರಿಸಿದರು.
Comments