ಬೆಂಗಳೂರು- ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಹೆಚ್ಚಳದ ಹೊರೆ ಹೊತ್ತಿರುವ ಗ್ರಾಹಕರಿಗೆ ವಿದ್ಯುತ್ ಬೆಲೆ ಏರಿಕೆಯ ಬರೆ ಬೀಳಲಿದೆ. ಇದೇ ಜುಲೈ 1 ರಿಂದ ಡಿಸೆಂಬರ್ 31 ರ ವರೆಗೆ ವಿದ್ಯುತ್ ಗ್ರಾಹಕರಿಂದ ಇಂಧನ ವೆಚ್ಚ ಹೊಂದಾಣಿಕೆ ವಸೂಲಿ ಮಾಡಲು ಕೆಇಆರ್ ಸಿ ಅರ್ಥಾತ್ ಕರ್ನಾಟಕ ವಿದ್ಯುತ್ ಪ್ರಸರಣ ನಿಯಂತ್ರಣ ಆಯೋಗ ಅನುಮತಿ ನೀಡಿದೆ.
ರಾಜ್ಯದ ಎಸ್ಕಾಂಗಳು ವಿವಿಧ ರೀತಿಯಲ್ಲಿ ಗ್ರಾಹಕರಿಂದ ಇಂಧನ ವೆಚ್ಚ ಹೊಂದಾಣಿಕೆ ವಸೂಲಿ ಮಾಡಲು ಕೆಇಆರ್ ಸಿ ಬೆಲೆ ನಿಗಧಿ ಮಾಡಿದೆ.
ಮೈಸೂರಿನ ಚೆಸ್ಕಾಂ 19 ಪೈಸೆ, ಬೆಂಗಳೂರಿನ ಬೆಸ್ಕಾಂ 31 ಪೈಸೆ, ಮೆಸ್ಕಾಂ 21 ಪೈಸೆ, ಹೆಸ್ಕಾಂ 27 ಪೈಸೆ ಹಾಗೂ ಜೆಸ್ಕಾಂ 26 ಪೈಸೆಯನ್ನು ಪ್ರತಿ ಯೂನಿಟ್ ಗೆ ವಿಧಿಸಿ ವಸೂಲಿ ಮಾಡುವಂತೆ ಕೆಇಆರ್ ಸಿ ಹೇಳಿದೆ.
ಇದರಿಂದ ಪ್ರತಿ ನೂರು ಯುನಿಟ್ ವಿದ್ಯುತ್ ಬಳಸುವ ಗ್ರಾಹಕರು ತಮ್ಮ ತಿಂಗಳ ವಿದ್ಯುತ್ ಬಿಲ್ ನಲ್ಲಿ ಹೆಚ್ಚುವರಿಯಾಗಿ 19 ರಿಂದ 31 ರೂಪಾಯಿ ಪಾವತಿ ಮಾಡಬೇಕಿದೆ.
ಇಂಧನ ಖರೀದಿ ವೆಚ್ಚ ಹಾಗೂ ವಿದ್ಯುತ್ ಉತ್ಪಾದಿಸಿ ಪೂರೈಸುವ ನಿಗಮಗಳು ವಿಧಿಸುವ ದರವನ್ನು ಎಸ್ಎಸಿ ಅರ್ಥಾತ್ ಇಂಧನ ವೆಚ್ಚ ಹೊಂದಾಣಿಕೆ ಎನ್ನಲಾಗುತ್ತದೆ. ಇಂಧನ ದರ ಹೆಚ್ಚಾದಾಗ ಅದರ ಹೊರೆಯನ್ನು ಸರ್ಕಾರ ಗ್ರಾಹಕರಿಂದ ವಸೂಲಿ ಮಾಡುತ್ತದೆ.
ಇಂಧನ ದರ ಹೆಚ್ಚಳದ ಹೊರೆ ಮಾತ್ರವಲ್ಲದೆ ಕಲ್ಲಿದ್ದಲು ದರ ಗಣನೀಯವಾಗಿ ಹೆಚ್ಚಳವಾದಾಗ ಅದರ ಹೊರೆಯನ್ನು ಕೂಡ ಸರ್ಕಾರ ಗ್ರಾಹಕರ ಮೇಲೆ ಹೊರಿಸಲಿದೆ. 2020-21 ರ ಸಾಲಿನ ಕೊನೆಯ ಎರಡು ತ್ರೈಮಾಸಿಕದಲ್ಲಿ ಕಲ್ಲಿದ್ದಲು ದರ ಹೆಚ್ಚಳವಾದಾಗ ವಿದ್ಯುತ್ ದರ ಹೆಚ್ಚಳ ಮಾಡುವಂತೆ ಎಸ್ಕಾಂಗಳು ಕೆಇಆರ್ ಸಿಗೆ ಮನವಿ ಮಾಡಿತ್ತು. ಬೆಸ್ಕಾಂ 55.28 ರೂ., ಮೆಸ್ಕಾಂ 38.98 ರೂ., ಸೆಸ್ಕ್ 40.47 ರೂ., ಹೆಸ್ಕಾಂ 49.54, ಜೆಸ್ಕಾಂ 39.36 ರೂ. ವಿಧಿಸುವಂತೆ ಪ್ರಸ್ತಾವದಲ್ಲಿ ಮನವಿ ಸಲ್ಲಿಸಿದ್ದವು.
Comments