ಮೈಸೂರು- “ಸೋಮಣ್ಣ ಮತ್ತು ಸಿದ್ದರಾಮಯ್ಯ ಕೆಳಹಂತದಿಂದ ರಾಜಕೀಯಕ್ಕೆ ಬಂದವರು. ವರುಣ ಕ್ಷೇತ್ರಕ್ಕೆ ಹೋಗಿ ನಿನ್ನ ಪ್ರತಾಪ ತೋರಿಸಬೇಡ. ನಿನ್ನ ಬೆತ್ತಲೆ ಪ್ರಪಂಚದ ಪ್ರತಾಪ ನಮ್ಮ ಬಳಿ ಇದೆ. ಮುಂದಿನ ದಿನಗಳಲ್ಲಿ ಅದನ್ನು ಬಿಡುಗಡೆ ಮಾಡುತ್ತೇವೆ.” ಹೀಗೆಂದು ಪ್ರತಾಪ್ ಸಿಂಹಗೆ ವಾರ್ನ್ ಮಾಡಿದವರು ಎಂ.ಎಲ್.ಸಿ ವಿಶ್ವನಾಥ್.
ಪದೇ ಪದೇ ಕರ್ನಾಟಕಕ್ಕೆ ಬರುತ್ತಿರುವ ಪ್ರಧಾನಿ ನರೇಂದ್ರ ಮೋದಿ ನಮ್ಮ ರಾಜ್ಯಕ್ಕೆ ನೀಡಿರುವ ಕೊಡುಗೆಯಾದರೂ ಏನು? ಲಜ್ಜೆಗೆಟ್ಟಿರುವ ಕರ್ನಾಟಕದ ಭ್ರಷ್ಟ ಬಿಜೆಪಿಯನ್ನು ಮೊದಲು ಸರಿಪಡಿಸಲಿ. ಬೇರೆ ಬ್ಯಾಂಕುಗಳ ಜೊತೆ ವಿಲೀನಗೊಳಿಸಿರುವ ನಮ್ಮ ಬ್ಯಾಂಕುಗಳನ್ನು ವಾಪಸ್ ಕೊಡಿ. ಹಿಂದಿ ಹೇರಿಕೆಯನ್ನು ನಿಲ್ಲಿಸಿ.
ನಂದಿನಿಯ ಅಸ್ತಿತ್ವಕ್ಕೆ ಧಕ್ಕೆ ತರಬೇಡಿ.
ಯಾವುದೇ ಕಾರಣಕ್ಕೂ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಿಲ್ಲ. ಮೋದಿ ಭೇಟಿಯಿಂದ ಯಾವುದೇ ಪರಿಣಾಮ ಬೀರುವುದಿಲ್ಲ.
ನಮ್ಮಂತಹವರು, ಕುಮಾರಸ್ವಾಮಿ ಅಂತಹವರ ನೆರವಿನಿಂದ ಬಿಜೆಪಿ ಅಧಿಕಾರಕ್ಕೆ ಬಂತು.
ಇನ್ನೆಂದಿಗೂ ಕರ್ನಾಟಕ ಮಾತ್ರವಲ್ಲದೆ ಇಡೀ ದಕ್ಷಿಣ ಭಾರತದಲ್ಲೇ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಎಚ್ ವಿಶ್ವನಾಥ್ ಭವಿಷ್ಯ ನುಡಿದರು.
ರಾಜ್ಯದ ಹಲವೆಡೆ ತ್ರಿಕೋನ ಸ್ಪರ್ಧೆ ಮತ್ತೆ ಕೆಲವೆಡೆ ನೇರ ಸ್ಪರ್ಧೆ ಏರ್ಪಡುವ ಲಕ್ಷಣಗಳು ಕಂಡು ಬಂದಿವೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಸ್ಪಷ್ಟ ಚಿತ್ರಣ ಗೊತ್ತಾಗಲಿದೆ. ಆಡಳಿತಾರೂಢ ಬಿಜೆಪಿ ಯಾವ ವಿಚಾರ ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತಿದೆ ಎಂಬುದನ್ನು ತಿಳಿಸಿಲ್ಲ. ಅನ್ನ, ಅಕ್ಷರ, ಆರೋಗ್ಯದ ಬಗ್ಗೆ ಬಿಜೆಪಿ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸುತ್ತಿಲ್ಲ. ಅಭಿವೃದ್ಧಿ ವಿಚಾರಗಳನ್ನು ಪ್ರಸ್ತಾಪಿಸುತ್ತಿಲ್ಲ.
ಈಗಲೂ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಲು ಬಿಜೆಪಿ ಮುಂದಾಗಿದೆ. ಬಿಜೆಪಿ ಧರ್ಮಾಧಾರಿತ ರಾಜಕಾರಣ ಮಾಡುತ್ತಿದೆ ಎಂದು ದೂರಿದರು.
ದಕ್ಷಿಣ ಭಾರತದ ಮೇಲೆ ಉತ್ತರ ಭಾರತದವರ ಯಜಮಾನಿಕೆ ಜಾಸ್ತಿಯಾಗುತ್ತಿದೆ. ಕರ್ನಾಟಕದ ಮೇಲೆ ಕೇಂದ್ರದ ಯಜಮಾನಿಕೆ ಹೆಚ್ಚಾಗುತ್ತಿದೆ.
ಪ್ರತಿಯೊಂದು ವಿಚಾರಕ್ಕೂ ಜಿ ಎಸ್ ಟಿ ಪಾವತಿ ಮಾಡಬೇಕಾಗಿದೆ. ಅಗತ್ಯ ವಸ್ತುಗಳ ಬೆಲೆ ಏರುತ್ತಿದ್ದು ಹೆಣ್ಣು ಮಕ್ಕಳು ಶಾಪ ಹಾಕುತ್ತಿದ್ದಾರೆ.
ರಾಜ್ಯದ ಜಿ ಎಸ್ ಟಿ ಪಾಲು ಸರಿಯಾಗಿ ಸಿಗುತ್ತಿಲ್ಲ.
ನಮ್ಮ ರಾಜ್ಯದ ಜಿ ಎಸ್ ಟಿ ಪಾಲು ಉತ್ತರದ ರಾಜ್ಯಗಳತ್ತ ಹರಿದು ಹೋಗುತ್ತಿದೆ. ನಮ್ಮ ಹೆಮ್ಮೆಯ ಅಸ್ಮಿತೆ ನಂದಿನಿಯ ಮೇಲೂ ಕಣ್ಣು ಬಿದ್ಧಿದೆ. ಉತ್ತರದವರ ಯಜಮಾನಿಕೆಯಿಂದ ನಾವು ತತ್ತರಿಸುವಂತಾಗಿದೆ ಎಚ್ ವಿಶ್ವನಾಥ್ ಹೇಳಿದರು.
Comments