ಮೈಸೂರು- ಮೈಸೂರಿನ ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಚುನಾವಣಾ ರಾಜಕೀಯದ ನಿವೃತ್ತಿ ಘೋಷಿಸಿ ಕುತೂಹಲ ಮೂಡಿಸಿದ್ದಾರೆ. ತನ್ನೀರ್ ಸೇಠ್ ನಡೆಯಿಂದ ಆತಂಕಗೊಂಡ ಬೆಂಬಲಿಗರು ಅವರ ಮನೆ ಮುಂದೆ ಜಮಾಯಿಸಿದರು. ಒಬ್ಬ ಬೆಂಬಲಿಗ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ರೆ, ಮತ್ತೊಬ್ಬ ಬೆಂಬಲಿಗ ಮನೆ ಮೇಲಿಂದ ಹಾರಿ ಸ್ವಹತ್ಯೆಯ ಬೆದರಿಕೆ ಹಾಕಿದನು. ಇದರಿಂದ ತನ್ವೀರ್ ಸೇಠ್ ಮನೆ ಮುಂದೆ ಹೈಡ್ರಾಮಾವೆ ನಡೆಯಿತು.
ಮೈಸೂರಿನ ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಚುನಾವಣಾ ರಾಜಕೀಯ ನಿವೃತ್ತಿಯ ಕಿಚ್ಚು ಹೊತ್ತಿಸಿದ್ದಾರೆ. ಆರೋಗ್ಯದ ದೃಷ್ಠಿಯಿಂದ ಚುನಾವಣೆಯಲ್ಲಿ ತಾನು ಸ್ಪರ್ಧೆ ಮಾಡುವುದಿಲ್ಲ ಎಂದು ನೇರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೆ ಪತ್ರ ಬರೆದಿದ್ದಾರೆ. ಇದು ತನ್ವೀರ್ ಸೇಠ್ ಬೆಂಬಲಿಗರನ್ನು ಆತಂಕಗೊಳಿಸಿತು. ಈ ವಿಚಾರ ತಿಳಿದ ಕೂಡಲೆ ತನ್ವೀರ್ ಸೇಠ್ ಬೆಂಬಲಿಗರು ಅವರ ಮನೆ ಮುಂದೆ ಜಮಾಯಿಸಿದರು. ಯಾವುದೇ ಕಾರಣಕ್ಕೂ ಚುನಾವಣಾ ರಾಜಕೀಯದಿಂದ ನಿವೃತ್ತಿ ಹೊಂದದಂತೆ ಬೆಂಬಲಿಗರ ಪಡೆ ತನ್ನೀರ್ ಸೇಠ್ ಗೆ ಕೂಗಿ ಹೇಳಿತು. ಇದರಿಂದ ತನ್ವೀರ್ ಸೇಠ್ ಮನೆ ಮುಂದೆ ಹೈಡ್ರಾಮವೇ ನಡೆಯಿತು. ಒಬ್ಬ ಬೆಂಬಲಿಗನಂತೂ ನೀವು ಚುನಾವಣಾ ರಾಜಕೀಯದಿಂದ ನಿವೃತ್ತಿ ಹೊಂದಿದರೆ ನಾನು ಆತ್ಮಹತ್ಯೆಗೆ ಶರಣಾಗುತ್ತೇನೆ ಎಂದು ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದನು.
ಮತ್ತೊಬ್ಬ ಬೆಂಬಲಿಗ ಮನೆ ಮೇಲೆ ಹತ್ತಿ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದನು. ಒಬ್ಬೊಬ್ಬರು ಆತ್ಮಹತ್ಯೆಯ ಹಾದಿ ಹಿಡಿದ ಕಾರಣ ಸ್ಥಳದಲ್ಲಿ ಹೈಡ್ರಾಮವೇ ನಡೆಯಿತು. ತರುವಾಯ ಆತ್ಮಹತ್ಯೆಗೆ ಯತ್ನಿಸಿದವರನ್ನು ತಡೆಯಲಾಯಿತು. ನಾನು ಚುನಾವಣಾ ರಾಜಕೀಯದಿಂದ ನಿವೃತ್ತಿ ಹೊಂದುವುದಾಗಿ ಕಾಂಗ್ರೆಸ್ ವರಿಷ್ಠರಿಗೆ ಪತ್ರ ಬರೆದು ತಿಳಿಸಿದ್ದೇನೆ. ಪಕ್ಷದ ವರಿಷ್ಠರು ಯಾವುದೇ ತೀರ್ಮಾನ ಕೈಗೊಂಡರೂ ಅದಕ್ಕೆ ಬದ್ಧವಾಗಿರುತ್ತೇನೆ ಎಂದು ಇದೇ ವೇಳೆ ತನ್ವೀರ್ ಸೇಠ್ ಸ್ಪಷ್ಟಪಡಿಸಿದರು.
ಚುನಾವಣಾ ರಾಜಕೀಯದಿಂದ ನಿವೃತ್ತಿ ಹೊಂದುವ ತನ್ವೀರ್ ಸೇಠ್ ಹೇಳಿಕೆ ಕುತೂಹಲ ಮೂಡಿಸಿದೆ. ಇದು ನಿಜವಾಗಿಯೂ ಚುನಾವಣಾ ರಾಜಕೀಯ ನಿವೃತ್ತಿ ಹೊಂದುವ ವಾಸ್ತವಾಂಶವೊ ಅಥವಾ ಇದರಲ್ಲಿ ರಾಜಕೀಯ ತಂತ್ರಗಾರಿಕೆ ಇದೆಯೊ ಎಂಬ ಬಗ್ಗೆ ಗುಸು ಗುಸು ಮಾತು ನಡೆಯುತ್ತಿದೆ. ಒಟ್ಟಾರೆ ತಮಗೂ ಟಿಕೆಟ್ ಬೇಕೆಂದು ಅರ್ಜಿ ಸಲ್ಲಿಸಿದ್ದ ವಿರೋಧಿಗಳಿಗೆ ತನ್ವೀರ್ ಸೇಠ್ ಬೆಂಬಲಿಗರಿಂದ ಒತ್ತಡದ ಪಂಚ್ ಕೊಟ್ಟಿದ್ದಾರೆ.
Comments