ಮೈಸೂರು- ಸಾಂಸ್ಕೃತಿಕ ನಗರಿ ಮೈಸೂರಿನ ಪ್ರತಿಷ್ಠಿತ ಕಾವೇರಿ ಹಾರ್ಟ್ ಅಂಡ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯು ವಿದೇಶಿ ಪ್ರಜೆಗೆ ಕಷ್ಟಕರವಾದ ಹೃದಯ ಸಂಬಂಧಿ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿದೆ.
ಯೆಮನ್ ದೇಶದ ಮೊಹಮ್ಮದ್ ಹುಸೇನ್ ಅಹಮ್ಮದ್ ಅವರು ಕಳೆದ ಒಂದು ವರ್ಷದಿಂದ ತೀವ್ರ ಉಸಿರಾಟದ ತೊಂದರೆ, ಕಾಲುಗಳ ಊತ ಸೇರಿದಂತೆ ಹಲವು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದರು.
ಮಾಧ್ಯಮ ಗೋಷ್ಠಿಯಲ್ಲಿ ಆಸ್ಪತ್ರೆಯ ಚೇರ್ಮನ್ ಡಾ.ಚಂದ್ರಶೇಖರ್ ಅವರು ಈ ಹಾರ್ಟ್ ಆಪರೇಷನ್ ಬಗ್ಗೆ ವಿವರ ನೀಡಿದರು.
ಈ ಮೊದಲೆ ಯೆಮನ್ ದೇಶದ ಸ್ನೇಹಿತರೊಬ್ಬರು ನಮ್ಮ ಆಸ್ಪತ್ರೆಯಲ್ಲಿ ಹಾರ್ಟ್ ಆಪರೇಷನ್ ಮಾಡಿಸಿಕೊಂಡಿದ್ದರು. ಅವರಿಂದ ನಮ್ಮ ಆಸ್ಪತ್ರೆ ಬಗ್ಗೆ ಮಾಹಿತಿ ತಿಳದು ಮೊಹಮ್ಮದ್ ಹುಸೇನ್ ಅಹಮ್ಮದ್ ಅವರು ಹೃದಯ ಸಂಬಂಧಿ ಶಸ್ತ್ರ ಚಿಕಿತ್ಸೆಗೆ ಕಾವೇರಿ ಆಸ್ಪತ್ರೆಗೆ ಬಂದರು ಎಂದು ಡಾ.ಚಂದ್ರಶೇಖರ್ ತಿಳಿಸಿದರು.
ಸುಮಾರು 7 ಗಂಟೆಗಳ ಸುದೀರ್ಘ ಆಪರೇಷನ್ ಮಾಡಿ ಹುಸೇನ್ ಗೆ ಎರಡು ಬೈಪಾಸ್, ಒಂದು ವಾಲ್ವ್ ರಿಪ್ಲೇಸ್ ಮೆಂಟ್ ಮಾಡಿ, ಮತ್ತೊಂದು ವಾಲ್ವ್ ರಿಪೇರಿ ಮಾಡಲಾಯಿತು ಎಂದು ಡಾ.ಚಂದ್ರಶೇಖರ್ ಹೇಳಿದರು.
ಇಂತಹ ಆಪರೇಷನ್ ನ್ನು ಬೆಂಗಳೂರು ಸೇರಿದಂತೆ ಇತರೆ ದೊಡ್ಡ ನಗರಗಳಲ್ಲಿ ಮಾತ್ರ ಮಾಡಲಾಗುತ್ತದೆ ಎಂಬ ಮಾತಿದೆ. ಆದರೆ ಆಧುನಿಕ ಉಪಕರಣವಿರುವ ಮೈಸೂರಿನ ಕಾವೇರಿ ಹಾರ್ಟ್ ಅಂಡ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯು ಕಡಿಮೆ ವೆಚ್ಚದಲ್ಲಿ ಈ ಆಪರೇಷನ್ ಮಾಡಿದೆ ಎಂದು ಡಾ.ಚಂದ್ರಶೇಖರ್ ವಿವರ ನೀಡಿದರು.
ಮುಖ್ಯ ಹೃದಯ ಶಸ್ತ್ರ ಚಿಕಿತ್ಸಕರಾದ ಡಾ.ಮಧುಪ್ರಕಾಶ್ ಆಪರೇಷನ್ ಮಾಡಿದ್ದಾರೆ. ಮುಖ್ಯ ಅರವಳಿಕೆ ತಜ್ಞರಾದ ಡಾ.ಸಾದ್ವಿಕ್ ಟೆಲ್ಕರ್ ಅಗತ್ಯ ಅರವಳಿಕೆ ನೀಡುವಲ್ಲಿ ಯಶಸ್ವಿಯಾದರು.
ಆಸ್ಪತ್ರೆಯ ಸೌಲಭ್ಯ ನಿರ್ದೇಶಕರಾದ ಸಂದೀಪ್ ಪಟೇಲ್ ಮಾತನಾಡಿ, ಬೇರೆ ಆಸ್ಪತ್ರೆಗೆ ಹೋಲಿಸಿದರೆ ನಮ್ಮ ಆಸ್ಪತ್ರೆಯಲ್ಲಿ ಕೈಗೆಟುಕುವ ದರದಲ್ಲಿ ಆಪರೇಷನ್ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಹುಸೇನ್ ಅವರು ಆರೋಗ್ಯದಿಂದ ಇದ್ದು ಯಮೇನ್ ಗೆ ಹೊರಟರು ಎಂದು ಹೇಳಿದರು.
Comments