ದಾವಣಗೆರೆ- ಅನಿಮೂನ್ ಗೆ ಹೋಗಿದ್ದ ನವದಂಪತಿಗಳಿಗೆ ಅಪಘಾತವಾಗಿ ಮದುವೆಯಾದ 15 ದಿನಕ್ಕೆ ಗಂಡನನ್ನು ಕಳೆದುಕೊಂಡ ನವವಿವಾಹಿತೆ ಬದುಕು ಈಗ ಚಿಂತಾಜನಕವಾಗಿದೆ.
ಮದುವೆಯಾಗಿ ಹನಿಮೂನ್ ಗೆ ಹೋಗಿ ಬರುತ್ತಿದ್ದ ಜೋಡಿಗೆ ಹದಿನೈದು ದಿನದಲ್ಲಿಯೇ ಬೈಕ್ ಅಪಘಾತವಾಗಿದೆ. ನವ ವಿವಾಹಿತೆ ಪ್ರೀತಿಯ ಪತಿಯನ್ನು ಕಳೆದುಕೊಂಡು ಮನಕಲುಕುವ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಜಿಗಳಿ ಗ್ರಾಮದಲ್ಲಿ ನಡೆದಿದೆ. ಮಠದ ರಾಜಯ್ಯ ಹಾಗೂ ಶೋಭಾ ದಂಪತಿ ಪುತ್ರ ಸಂಜಯ್ (28) ಹಾಗೂ ಬೈಲಹೊಂಗಲದ ಪ್ರೀತಿ ನವೆಂಬರ್ 28 ರಂದು ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಸಮುದಾಯ ಭವನದಲ್ಲಿ ಇಬ್ಬರು ಶಾಸ್ತ್ರೋಕ್ತವಾಗಿ ಮದುವೆಯಾಗಿದ್ದರು.
ಇವರಿಬ್ಬರು ಕೂಡ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದು, ಹನಿಮೂನ್ ಗೆ ಅಂತ ಧಾರ್ಮಿಕ ಕ್ಷೇತ್ರಗಳಿಗೆ ಹೋಗಿ ದೇವರ ದರ್ಶನ ಪಡೆದು ಬೈಕ್ ನಲ್ಲಿಯೇ ಎರಡು ದಿನದ ಜಾಲಿ ಟ್ರಿಪ್ ಮುಗಿಸಿ ಊರಿಗೆ ಹಿಂದಿರುಗುತ್ತಿದ್ದರು. ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಕೋಡದ ಬಳಿ ಬರುವಾಗ ನಿಂತಿದ್ದ ಕಬ್ಬಿನ ಟ್ರ್ಯಾಕ್ಟರ್ ಗೆ ದಂಪತಿ ಪ್ರಯಾಣಿಸುತ್ತಿದ್ದ ಬೈಕ್ ಡಿಕ್ಕಿ ಹೊಡೆದಿದೆ. ಪರಿಣಾಮ ನೆಲಕ್ಕೆ ಬಿದ್ದ ಸಂಜಯ್ ತಲೆಗೆ ತೀವ್ರ ಪೆಟ್ಟಾಗಿದೆ. ಎರಡೂ ಕಿವಿಯಲ್ಲಿ ರಕ್ತಸ್ರಾವವಾಗಿದೆ. ಬೈಕ್ ನ ಹಿಂಬದಿ ಯಲ್ಲಿದ್ದ ಪ್ರೀತಿಗೂ ತೀವ್ರತರಹದ ಗಾಯಗಳಾಗಿದೆ.
ಘಟನೆ ತಿಳಿದ ತಕ್ಷಣ ಸಮೀಪದ ಹಂಸಬಾವಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಸಂಜಯ್ ಮತ್ತು ಪ್ರೀತಿಯರನ್ನು ರಾಣೆಬೆನ್ನೂರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ, ದಾವಣಗೆರೆ ಬಾಪೂಜಿ ಆಸ್ಪತ್ರೆಗೆ ಕರೆದುಕೊಂಡು ಬರುವ ವೇಳೆ ದಾರಿ ಮಧ್ಯೆ ಸಂಜಯ್ ಮೃತಪಟ್ಟಿದ್ದಾರೆ. ಪತ್ನಿ ಪ್ರೀತಿ ಎರಡೂ ಕೈ ಹಾಗೂ ತಲೆಗೆ ಮತ್ತು ಸೊಂಟಕ್ಕೆ ತೀವ್ರ ಪೆಟ್ಟಾಗಿದೆ. ಸದ್ಯ ದಾವಣಗೆರೆ ಬಾಪೂಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರೀತಿ ಮತ್ತು ಸಂಜಯ್ ಇಬ್ಬರು ಡಿಸೆಂಬರ್ 10 ಕ್ಕೆ ಹರಿಹರದ ಜಿಗಳಿಯಿಂದ ಬೈಕ್ ನಲ್ಲಿ
ಹನಿಮೂನ್ ಗೆ ಹೊರಟಿದ್ದಾರೆ. ಮೊದಲು ಸಾಗರ ತಾಲೂಕಿನ ಸಿಂಗಧೂರು ದೇವಿ ದರ್ಶನ ಪಡೆದಿದ್ದಾರೆ. ಬಳಿಕ ಮುರುಡೇಶ್ವರಕ್ಕೆ ಹೋಗಿ ರಾತ್ರಿ ತಂಗಿದ್ದಾರೆ. ಡಿಸೆಂಬರ್ 11ಕ್ಕೆ ಶಿರಸಿಗೆ ಬಂದು ಅಲ್ಲಿ ಮಾರಿಕಾಂಬ ದೇವಿ ದರ್ಶನ ಪಡೆದು ವಾಪಸ್ಸು ಜಿಗಳಿಗೆ ಹೋಗುತ್ತಿರುವಾಗ ಈ ಅವಘಡ ಸಂಭವಿಸಿದೆ.
ಇನ್ನು ಸಂಜಯ್ ಶವ ಪರೀಕ್ಷೆ ನಂತರ ತನ್ನ ಗಂಡ ಸಂಜಯ್ ನೋಡಲು ಪ್ರೀತಿ ಸ್ಟ್ರೆಚರ್ನಲ್ಲಿ ಶವಾಗಾರಕ್ಕೆ ಬಂದಿದ್ದರು. ಬಳಿಕ ಸ್ಟ್ರೆಚರ್ ನಲ್ಲಿದ್ದುಕೊಂಡೇ ತನ್ನ ಗಂಡನ ಮುಖ ಸವರಿ ದುಃಖಿಸಿದ ಕ್ಷಣ ಮನಕಲಕುವಂತಿತ್ತು. ಅ ಸನ್ನಿವೇಶವನ್ನು ನೋಡಿ ಅಲ್ಲಿ ನೆರದವರು ಕೂಡ ಕಣ್ಣೀರು ಹಾಕಿದ್ದರು..ಸಾಕಷ್ಟು ಕನಸು ಹೊತ್ತಿದ್ದ ನವ ಜೋಡಿ ನೂತನ ಸಂಸಾರಕ್ಕೆ ಅಣಿ ಇಡಲು ಸಂಜಯ್ ಚಿಕ್ಕಪ್ಪ ಬಸವರಾಜಯ್ಯ ಬೆಂಗಳೂರಿನಲ್ಲಿ ಮನೆ ನೋಡಿದ್ದರು. ಇದೇ ಡಿಸೆಂಬರ್ 12 ಕ್ಕೆ ಇಬ್ಬರು ಸೇರಿ ಹಾಲು ಉಕ್ಕಿಸಿ ಸಂಸಾರದ ಬಂಡಿ ಸಾಗಬೇಕು ಎಂದು ಕೊಂಡಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿತ್ತು.
Comments