ಭಾರತಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ಜಾತಿ ವ್ಯವಸ್ಥೆಯಿಂದ ಸಮಾಜವನ್ನು ಮುಕ್ತ ಮಾಡಿಲ್ಲ. ಇನ್ನೂ ಕೂಡ ಬಹಳಷ್ಟು ದೇವಸ್ಥಾನಗಳಿಗೆ ದಲಿತರು ಕಾಲಿಡುವಂತಿಲ್ಲ. ಅಂತಹ ದೇವಸ್ಥಾನಗಳಲ್ಲಿ ಕೇರಳದ ಕಾಸರಗೋಡು ಜಿಲ್ಲೆಯ ಎಣ್ಮಕಜೆಯ ಸ್ವರ್ಗದಲ್ಲಿರುವ ಜಟಾಧಾರಿ ದೇವಸ್ಥಾನ ಕೂಡ ಒಂದು.
ಈ ದೇವಸ್ಥಾನದ ಪ್ರವೇಶ ಮೇಲ್ಜಾತಿಯವರಿಗೆ ಮಾತ್ರ ಸೀಮಿತವಾಗಿತ್ತು. ದೇವಸ್ಥಾನದ 18 ಮೆಟ್ಟಿಲುಗಳನ್ನು ಈ ತನಕ ದಲಿತರು ಸೇರಿದಂತೆ ಇತರೆ ಜನಾಂಗದವರು ಹತ್ತಿಲ್ಲ. ಹತ್ತಲು ಬಿಟ್ಟಿಲ್ಲ. ಆದರೆ ನೂರಾರು ವರ್ಷಗಳ ಅನಿಷ್ಟ ಪದ್ಧತಿಯನ್ನು ಕಿತ್ತು ಹಾಕಿರುವ ದಲಿತರು ಈಗ ಈ ದೇವಸ್ಥಾನದ ಮೆಟ್ಟಿಲುಗಳನ್ನು ಹತ್ತಿದ್ದಾರೆ.
ಪಟ್ಟಿಕಜಾತಿ ಕ್ಷೇಮ ಸಮಿತಿ ಅಥವಾ ಪರಿಶಿಷ್ಟ ಜಾತಿ ಕಲ್ಯಾಣ ಸಮಿತಿಯ ನೇತೃತ್ವದಲ್ಲಿ ದಲಿತ ಸಮುದಾಯದ ಗುಂಪು 18 ಮೆಟ್ಟಿಲು ಹತ್ತಿ ಇವತ್ತು ದೇವಸ್ಥಾನ ಪ್ರವೇಶಿಸಿತು.
ಪರಿಶಿಷ್ಟ ಜಾತಿಗಳಾದ ಕೇರಳದಲ್ಲಿ ಕರೆಯಲ್ಪಡುವ ನಲ್ಕೆದಾಯ(ಕೋಪಾಲ), ಜಟಾಧಾರಿ ತೆಯ್ಯಂ ಕಟ್ಟುವ ಜಾತಿ, ಮುಗೇರ ಮತ್ತು ಬೈರ, ಕೊರಗ ಮತ್ತು ಮಾಯಿಲ ಸೇರಿದಂತೆ ಹಲವು ಜಾತಿಗಳಿಗೆ ಈ ದೇವಸ್ಥಾನಕ್ಕೆ ಪ್ರವೇಶವಿರಲಿಲ್ಲ.
ಆದರೆ ಈಗ ಪರಿಶಿಷ್ಟ ಜಾತಿಯವರು ಕೂಡ ಈ ದೇವಸ್ಥಾನ ಪ್ರವೇಶಿಸಿದ್ದಾರೆ. ಇದು ಹಲವು ಸಮುದಾಯದಲ್ಲಿ ಸಂತಸ ಉಂಟು ಮಾಡಿದೆ.
Comments