ಮಡಿಕೇರಿ- ಇನ್ನು ಮುಂದೆ ಮದುವೆ ಸೇರಿದಂತೆ ಇತರೆ ಆಚರಣೆ ವೇಳೆ ಶಾಂಪೇನ್ ಸೇವನೆ, ಕೇಕ್ ಕತ್ತರಿಸುವುದು, ಪಟಾಕಿ ಸಿಡಿಸುವುದನ್ನು ನಿಷೇಧಿಸಿ ಕೊಡವ ಸಮಾಜ ಮಹತ್ವದ ನಿರ್ಣಯ ಕೈಗೊಂಡಿದೆ.
ಕೊಡಗು ಜಿಲ್ಲೆ ವಿರಾಜಪೇಟೆಯ ಕೊಡವ ಸಮಾಜವು ಅಧ್ಯಕ್ಷ ವಂಚಿರ ನಾಣಯ್ಯ ಅಧ್ಯಕ್ಷತೆಯಲ್ಲಿ ನಡೆಸಿದ 99 ನೇ ಸಾಮಾನ್ಯ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿದೆ. 15 ಮಂದಿ ನಿರ್ದೇಶಕರು ಹಾಗೂ 357 ಸದಸ್ಯರು ಪಾಲ್ಗೊಂಡಿದ್ದ ಸಭೆಯಲ್ಲಿ ಸಮಗ್ರವಾಗಿ ಚರ್ಚೆ ಮಾಡಿ ಈ ನಿರ್ಧಾರ ಮಾಡಲಾಗಿದೆ.
ಕೊಡವ ಸಮುದಾಯಕ್ಕೆ ಸೇರಿದ ಮಧುಮಗ ಗಡ್ಡ ಬಿಡುವಂತಿಲ್ಲ. ಮದುವೆ ಗಂಡು ಗಡ್ಡವನ್ನು ಸಂಪೂರ್ಣವಾಗಿ ಶೇವ್ ಮಾಡಿರಬೇಕು. ಮಧು ಮಗಳು ತನ್ನ ತಲೆಗೂದಲನ್ನು ಸಡಿಲವಾಗಿ ಬಿಡಬಾರದು. ಗಂಗಾ ಪೂಜೆ ವೇಳೆ ಪಟಾಕಿ ಸಿಡಿಸಬಾರದು. ಕೇಕ್ ಕತ್ತರಿಸಬಾರದು, ಶಾಂಪೇನ್ ಬಾಟಲಿಗಳನ್ನು ತೆರೆಯಬಾರದು, ಹೂವಿನ ದಳಗಳನ್ನು ಸುರಿಯಬಾರದು ಎಂಬ ತೀರ್ಮಾನವನ್ನು ಕೊಡವ ಸಮಾಜ ತೆಗೆದುಕೊಂಡಿದೆ.
ಒಂದು ವೇಳೆ ಕೊಡವ ಸಮುದಾಯದ ಯುವತಿಯರು ಬೇರೆ ಸಮುದಾಯದ ಹುಡುಗನನ್ನು ಮದುವೆಯಾದರೆ, ಆ ಹುಡುಗ ಕೊಡವ ದಿರಿಸು ತೊಡಲು ಅವಕಾಶ ನೀಡಬಾರದು. ಇದೇ ವೇಳೆ ವಧುವಿನ ತಾಯಿ ಪತ್ತಾಕ್ ಆಭರಣವನ್ನು ಮಗಳಿಗೆ ತೊಡಿಸಬಾರುದು ಎಂಬ ನಿರ್ಧಾರವನ್ನು ಕೂಡ ಕೈಗೊಳ್ಳಲಾಗಿದೆ.
ಕೊಡವ ಸಂಪ್ರದಾಯ ಹಾಗೂ ಸಂಸ್ಕ್ರತಿಯನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಪೊನ್ನಂಪೋಟೆ ಕೊಡವ ಸಮಾಜದ ಅಧ್ಯಕ್ಷ ಚೊಟಕ್ಮಾಡ ರಾಜೀವ್ ಬೋಪಯ್ಯ ಸ್ಪಷ್ಟಪಡಿಸಿದ್ದಾರೆ.
Comments